
ಕಾಠ್ಮಂಡು/ನವದೆಹಲಿ: ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಹಾಗೂ ಭ್ರಷ್ಟಾಚಾರದ ವಿರುದ್ಧ ನೇಪಾಳದಲ್ಲಿ ಜೆನ್ ಝಡ್ ಯುವ ಜನತೆಯ ಪ್ರತಿಭಟನೆ ಬುಧವಾರವೂ (ಸೆ.10) ತೀವ್ರ ಸ್ವರೂಪ ಪಡೆದಿದ್ದು, ಇದರ ಪರಿಣಾಮ ಕಾಠ್ಮಂಡು ವಿಮಾನ ನಿಲ್ದಾಣ ಬಂದ್ ಮಾಡಿದ್ದು, ಇದರ ಪರಿಣಾಮ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯ ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕನ್ನಡಿಗರು ಸುರಕ್ಷಿತ:
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನೇಪಾಳದ ಕಾಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲದೇ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಂತಿಪುರ್ ಮಾಧ್ಯಮ ಕೇಂದ್ರ ಕಚೇರಿಗೆ ಬೆಂಕಿ:
ಉದ್ರಿಕ್ತ ಪ್ರತಿಭಟನಾಕಾರರು ಮಂಗಳವಾರ ರಾತ್ರಿ ಕಾಠ್ಮಂಡುವಿನಲ್ಲಿರುವ ಕಾಂತಿಪುರ್ ಮೀಡಿಯಾ ಗ್ರೂಪ್ ಕೇಂದ್ರ ಕಚೇರಿಗೆ ಬೆಂಕಿ ಹಚ್ಚಿದ್ದು, ದಟ್ಟ ಹೊಗೆ ಸುತ್ತಮುತ್ತಲಿನ ಪರಿಸರದಲ್ಲಿ ಆವರಿಸಿಕೊಂಡಿದೆ ಎಂದು ವರದಿ ತಿಳಿಸಿದೆ.














