ಸ್ನೇಹಿತರಿಂದಾದ ಕಿರುಕುಳ ಸಹಿಸಲಾರದೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಶರಣು – ಕಹಳೆ ನ್ಯೂಸ್

ತೆಲಂಗಾಣ : ಸ್ನೇಹಿತರಿಂದಾದ ಕಿರುಕುಳವನ್ನು ಸಹಿಸಲಾರದೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಜಗಿತ್ಯಾಲ ಗ್ರಾಮೀಣ ಮಂಡಲದಲ್ಲಿ ನಡೆದಿದೆ.
ಮೃತಳನ್ನು ಕಾಟಿಪಲ್ಲಿ ನಿತ್ಯಾ (21) ಎಂದು ಗುರುತಿಸಲಾಗಿದೆ.
ತನ್ನ ಕಾಲೇಜು ಮತ್ತು ಹಾಸ್ಟೆಲ್ನಲ್ಲಿ ಸ್ನೇಹಿತರಿಂದ ನಿರಂತರವಾಗಿ ಮಾನಸಿಕ ಕಿರುಕುಳಕ್ಕೆ ಒಳಗಾಗಿ, ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಪೊಲೀಸರ ವಿವರಗಳ ಪ್ರಕಾರ, ನಿತ್ಯಾ ಹೈದರಾಬಾದ್ನ ರಿಷಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ನ ಮೂರನೇ ವರ್ಷದಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ವೈಷ್ಣವಿ ಮತ್ತು ಸಂಜನಾ ಕಳೆದ ಕೆಲವು ದಿನಗಳಿಂದ ನಿತ್ಯಾಳನ್ನು ನಿಂದಿಸುತ್ತಿದ್ದರು ಎಂಬ ಆರೋಪವಿದೆ. ಕಿರುಕುಳದಿಂದಾಗಿ ತೀವ್ರ ಮಾನಸಿಕ ತೊಂದರೆ ಆಗಿ, ಓದಿನಲ್ಲೂ ನಿತ್ಯಾ ಹಿಂದಿಳಿದಿದ್ದಳು.
ಸ್ನೇಹಿತರ ಕಿರುಕುಳದಿಂದ ಖಿನ್ನತೆಗೆ ಜಾರಿದ್ದ ನಿತ್ಯ, ಜುಲೈ 1ರಂದು ಮನೆಗೆ ಬಂದಿದ್ದಳು. ಜುಲೈ 2 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೀಟನಾಶಕ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ನೋಡಿದ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಜಗ್ತಿಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕರೀಂನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಚಿಕಿತ್ಸೆ ಪಡೆಯುತ್ತಿದ್ದಾಗ ಶುಕ್ರವಾರ ಬೆಳಗ್ಗೆ ನಿತ್ಯಾ ಮೃತಪಟ್ಟಳು. ಮೃತಳ ತಂದೆ ಕಾಟಿಪಲ್ಲಿ ತಿರುಪತಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮೀಣ ಸಬ್-ಇನ್ಸ್ಪೆಕ್ಟರ್ ಸುಧಾಕರ್ ತಿಳಿಸಿದ್ದಾರೆ.













