
ಉಪ್ಪಿನಂಗಡಿ: ನೇತ್ರಾವತಿ ನದಿಯು ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ 31 ಮೀ ಆಗಿದ್ದು, 28.05 ಮೀ. ಎತ್ತರದಲ್ಲಿ ಹರಿಯುತ್ತಿದೆ.
ಕುಮಾರಧಾರಾ ನದಿಗಿಂತಲೂ ಅಧಿಕ ಪ್ರಮಾಣದ ನೀರಿನ ಹರಿವು ನೇತ್ರಾವತಿಯಲ್ಲಿದ್ದು, ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬಳಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳ ಪೈಕಿ ರಾತ್ರಿಯ ವೇಳೆಗೆ 27 ಮೆಟ್ಟಿಲುಗಳು ಮುಳುಗಿವೆ.
ನದಿಯಲ್ಲಿ ನೀರಿನ ಹರಿಯುವಿಕೆಯ ರಭಸ ಹೆಚ್ಚಿದ್ದು, ಇದರಿಂದ ದೇವಾಲಯದ ಹಿಂಬದಿಯಿಂದ ಹರಿದು ಬಂದು ನೇತ್ರಾವತಿಯೊಂದಿಗೆ ವಿಲೀನಗೊಳ್ಳುವ ಕುಮಾರಧಾರೆಯ ನೀರಿನ ಸರಾಗ ಹರಿಯುವಿಕೆಯನ್ನು ನೇತ್ರಾವತಿ ನದಿಯು ಕಟ್ಟಿದೆ. ಇದರಿಂದ ಕುಮಾರಧಾರಾ ನೀರಿನೊಂದಿಗೆ ಹರಿದು ಬಂದ ಕಸ-ಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ತ್ಯಾಜ್ಯವು ಕುಮಾರಧಾರಾ ನದಿಯ ಹಳೆಯ ಸೇತುವೆಯ ಬಳಿ ಶೇಖರಣೆಗೊಂಡಿದೆ.
ದೇವಾಲಯದ ಬಳಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣೆ ತಂಡವು ಮೊಕ್ಕಾಂ ಹೂಡಿದ್ದು, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ನೇತೃತ್ವ ವಹಿಸಿದ್ದಾರೆ.














