
ಮಂಗಳೂರು: ತೆಂಕು ತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ (70) ರವಿವಾರ ಜೂ8 ರಂದು ನಿಧನ ಹೊಂದಿದರು.
ಕೊರಗದಾಸ ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದ ಕಟ್ಟೆ, ಸುರತ್ಕಲ್ ಮತ್ತು ದೀರ್ಘಕಾಲ ಕಟೀಲು ಮೇಳ ಹೀಗೆ ಒಟ್ಟೂ ಸುಮಾರು ಐದು ದಶಕ ಯಕ್ಷಗಾನ ತಿರುಗಾಟ ಮಾಡಿದ್ದರು. ಮೂಕಾಸುರ, ವಿಜಯ, ದಾರುಕ, ಪಾಪಣ್ಣ, ಬಾಹುಕ ಮೊದಲಾದ ಪೌರಾಣಿಕ ಪಾತ್ರಗಳ ಮೂಲಕ ಕಲಾರಸಿಕರನ್ನು ರಂಜಿಸಿದ್ದರು. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಣೆ ಮಾಡಿ ಜನಪ್ರಿಯರಾಗಿದ್ದರು.
ಯಕ್ಷನಿಧಿಯ ಮೇಳದ ಪ್ರತಿನಿಧಿಯಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಸಂಸ್ಥೆಯಿಂದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯಲ್ಲದೆ ಒಂದು ವಾರದ ಹಿಂದೆ ಸಂಸ್ಥೆಯು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ‘ಸುವರ್ಣ ಪುರಸ್ಕಾರ’ಕ್ಕೂ ಭಾಜನರಾಗಿದ್ದರು.
ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಪದ್ಮನಾಭ ಶೆಟ್ಟಿಗಾರ್ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸೇರಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.














