
ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 2 ಶತಮಾನಗಳ ಬಳಿಕ ಮಹಾ ಕುಂಭಾಭಿಷೇಕ ನಡೆದಿದ್ದು, ಭಾನುವಾರ ಭಕ್ತರು ಈ ಅಪರೂಪದ ಆಚರಣೆಯನ್ನು ಕಣ್ತುಂಬಿಕೊಂಡರು. ಸಾಕಷ್ಟು ಸಮಯದಿಂದ ವಿಳಂಬವಾಗಿದ್ದ ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಇತ್ತೀಚೆಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 270 ವರ್ಷಗಳ ಬಳಿಕ ಈ ಅದ್ದೂರಿ ಮಹಾಕುಂಭಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅದರಂತೆ ಭಾನುವಾರ ಬೆಳಗ್ಗೆ ದೇವಾಲಯದ ಆವರಣದಲ್ಲೇ ಇರುವ ತಿರುವಾಂಬಾಡಿ ಕೃಷ್ಣ ದೇಗುಲಕ್ಕೆ ಅಷ್ಟಬಂಧ ಕಳಶ ಸ್ಥಾಪನೆ, ವಿಶ್ವಕಸೇನಾ ಮೂರ್ತಿ ಮರುಸ್ಥಾಪನೆ ಹಾಗೂ ಗೋಪುರದ ಮೇಲಿನ ಕಳಶದ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು ಎಂದು ದೇವಾಲಯದ ಮೂಲಗಳು ತಿಳಿಸಿವೆ.














