ಬೆಂಗಳೂರು : ಹೆಚ್ಚಿದ ವರುಣಾರ್ಭಟ, ಶಾಲಾ-ಕಾಲೇಜುಗಳಿಗೆ ರಜೆ; 4 ದಿನ ರೆಡ್ ಅಲರ್ಟ್ ಘೋಷಣೆ –ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಈ ಬಾರಿ ಆರಂಭದಲ್ಲಿ ಅಬ್ಬರ ತೋರಿಸುತ್ತಿದ್ದು, ಮಳೆಯ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲಿಯೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಆರ್ಭಟಿಸುತ್ತಿದ್ದು, ಅಪಾರ ಹಾನಿಯನ್ನೂ ಉಂಟುಮಾಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ.
ಈ ಮಳೆ ಮೇ 30ರ ವರೆಗೆ ಮುಂದುವರೆಯಲಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆಯಾಗಲಿದೆ?
ಹೌದು, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಮುಂಬೈ, ಗೋವಾ ಸೇರಿದಂತೆ ಅನೇಕ ಕಡೆ ಭರ್ಜರಿ ಮಳೆಯಾಗುತ್ತಿದ್ದು, ರಾಜ್ಯದಲ್ಲಿಯೂ ಅದೇ ರೀತಿ ವರುಣ ಅಬ್ಬರಿಸುತ್ತಿದ್ದಾನೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮೇ 30ರ ವರೆಗೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ 5 ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಬೀದರ್, ಕಲಬುರಗಿ, ಯಾದಗಿರಿ ವಿಜಯಪುರ ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:
ಇನ್ನು, ಕರಾವಳಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ 2 ದಿನಗಳ ಕಾಲ ಅಂದರೆ ಮೇ 27 ಮತ್ತು ಮೇ 28ರಂದು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ದಾರಿ ಕಾಣದೆ ಡಿವೈಡರ್ಗೆ ಗುದ್ದಿ ಇಬ್ಬರ ಸಾವು:
ಇದರ ನಡುವೆ ಮಳೆಯ ಅಬ್ಬರಕ್ಕೆ ಮೂವರು ಸಾವನ್ನಪ್ಪಿದ ಘಟನೆ ಸಹ ನಡೆದಿದೆ. ಬೆಂಗಳೂರು ಮೂಲದ ಇಬ್ಬರು ಯುವಕರು ಕಾರಿನಲ್ಲಿ ತೆರಳುತ್ತಿದ್ದಾಗ ದಾರಿ ಮಧ್ಯೆ ಮಳೆಯಿಂದ ರಸ್ತೆ ಕಾಣದೆ ಚಾಲಕ ರಸ್ತೆ ಬದಿಯ ಕಬ್ಬಿಣದ ಡಿವೈಡರ್ಗೆ ಕಾರು ಗುದ್ದಿದ್ದಾರೆ. ಇದರ ಪರಿಣಾಮ ಯುವರಿಬ್ಬರೂ ಸಾವಗೀಡಾಗಿದ್ದಾರೆ.
ನದಿ, ಜಲಪಾತಗಳ ಬಳಿ ಹೋಗದಂತೆ ಎಚ್ಚರಿಕೆ:
ಇನ್ನು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಗಳ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಸೂಚನೆ ನೀಡಿದೆ. ಅಲ್ಲದೇ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲಾಡಳಿತ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿದೆ. ಮುರುಡೇಶ್ವರ ಮತ್ತು ಕಾರವಾರ ಕಡಲತೀರದಲ್ಲಿ ರೆಡ್ ಪ್ಲಾಗ್ ಹಾಕಿದ್ದು, ಪ್ರವಾಸಿಗರು ಆಗಮಿಸಿದಂತೆ ಸೂಚನೆ ನೀಡಲಾಗಿದೆ.














