ಜೀವನದಲ್ಲಿ ಕನ್ನಡ ಮಾತನಾಡಲ್ಲ, ಹಿಂದಿ ಮಾತಾಡು : ಸೊಕ್ಕಿನಿಂದ ಹೇಳಿದ ಎಸ್ಬಿಐ ಮ್ಯಾನೇಜರ್- ಕಹಳೆ ನ್ಯೂಸ್

ಆನೇಕಲ್: ತಾಲೂಕಿನ ಸೂರ್ಯನಗರದ ಎಸ್ಬಿಐ ಬ್ಯಾಂಕ್ನ ಮ್ಯಾನೇಜರ್ ಕನ್ನಡ ಗ್ರಾಹಕರ ಜೊತೆ ಕನ್ನಡ ಮಾತನಾಡದೇ ಹಿಂದಿಯಲ್ಲಿ ಮಾತನಾಡಿ ಕನ್ನಡ ಮಾತನಾಡುವುದಿಲ್ಲ ಎಂದು ವಾಗ್ವಾದಕ್ಕಿಳಿದಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬರು ಮ್ಯಾನೇಜರ್ ಸೊಕ್ಕಿನ ಮಾತುಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ವ್ಯಕ್ತಿ ಮೇಡಂ ಇದು ಕರ್ನಾ ಟಕ, ಬೆಂಗಳೂರು ಇಲ್ಲಿ ನೀವು ಕನ್ನಡದಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡರೂ ಅಹಂನಿಂದಲೇ ಉತ್ತರಿಸಿದ ಮ್ಯಾನೇಜರ್ ಹಿಂದಿ ಮಾತನಾಡು ಎಂದು ಎದುರು ಉತ್ತರ ನೀಡಿದ್ದಾರೆ.
ಅಲ್ಲದೇ ಬೆಂಗಳೂರು ಆದ್ರೇನು ಇದು ಭಾರತ ಇಲ್ಲಿ ಹಿಂದಿ ಮಾತನಾಡು ಎಂದು ಅವಾಜ್ ಹಾಕಿದ್ದಾರೆ. ಬಳಿಕ ಆರ್ಬಿಐ ನಿಯಮದ ಪ್ರಕಾರ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಬೇಕು ಎಂದು ತಿಳಿ ಹೇಳಿದರೂ ಕೇಳುವ ತಾಳ್ಮೆ ಇಲ್ಲದ ಆಕೆ ಸ್ಥಳದಿಂದ ನನ್ನ ಜೀವನದಲ್ಲಿ ಕನ್ನಡ ಮಾತನಾಡುವುದಿಲ್ಲ ಎಂದು ದರ್ಪದಿಂದ ಹೇಳಿ ತಮ್ಮ ಕ್ಯಾಬಿನ್ನತ್ತ ನಡೆದಿದ್ದಾರೆ.
ಇನ್ನು ವಿಡಿಯೊದಲ್ಲಿ ಬ್ಯಾಂಕ್ನಲ್ಲಿ ಕೆಸಲ ನಿರ್ವಹಿಸುವ ಸ್ಥಳೀಯ ಸಿಬ್ಬಂದಿ ತಮ್ಮ ಜತೆಗೂ ಸಹ ಆಕೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಈ ವಿಡಿಯೊ ಹಂಚಿಕೊಂಡಿರುವ ನೆಟ್ಟಿಗರು ಎಸ್ಬಿಐ ಎಕ್ಸ್ ಖಾತೆಯನ್ನು ಉಲ್ಲೇಖಿಸಿ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.














