
ಮಂಗಳೂರು: ಹವಾಮಾನದ ನಿಖರ ಮಾಹಿತಿ ಪಡೆಯುವಲ್ಲಿ ರಾಜ್ಯದಲ್ಲೇ ಮೊದಲ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ “ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್’ ಶಕ್ತಿನಗರದ ಭಾರತೀಯ ಹವಾಮಾನ ಇಲಾಖೆಯ ಕೇಂದ್ರದಲ್ಲಿ ಸ್ಥಾಪನೆಗೊಂಡಿದೆ. ಮುಂದಿನ ಮುಂಗಾರಿನಲ್ಲಿ ರಾಡಾರ್ ಮೂಲಕವೇ ಹವಾಮಾನದ ಮಾಹಿತಿ ಪಡೆದು ಬಿತ್ತರಿಸಲಾಗುವುದು.
“ಮಿಷನ್ ಮೌಸಮ್’ ಯೋಜನೆಯ ಭಾಗವಾಗಿ ಕೇಂದ್ರ ಸರಕಾರ ದೇಶಾದ್ಯಂತ ಸುಮಾರು 2,000 ಕೋ.ರೂ. ವೆಚ್ಚದಲ್ಲಿ ಹವಾಮಾನ ಇಲಾಖೆಗೆ ಸಂಬಂಧಿಸಿದ ಉಪಕರಣಗಳ ಆಧುನೀಕರಣ ಮತ್ತು ಉನ್ನತೀಕರಣ ಕೈಗೊಳ್ಳುತ್ತಿದೆ. ಅದರಂತೆ 10 ಕೋ.ರೂ ವೆಚ್ಚದಲ್ಲಿ “ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್’ ಅಳವಡಿಸಲಾಗುತ್ತಿದೆ. ಗುಡುಗು – ಮಿಂಚು ಸಹಿತ ಮಳೆ, ಆಲಿಕಲ್ಲು ಮಳೆ, ಬಿರುಸಿನ ಮಳೆ, ಪ್ರವಾಹ ಮುನ್ಸೂಚನೆ, ಗಾಳಿಯ ಚಲನೆ, ಸಮುದ್ರದಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಮಾಹಿತಿಯನ್ನು ಈ ರಾಡಾರ್ ಒದಗಿಸಲಿದೆ.
250-300 ಕಿ.ಮೀ. ವ್ಯಾಪ್ತಿ
ರಾಡಾರ್ ತನ್ನ ಕೇಂದ್ರದಿಂದ ವೃತ್ತಾಕಾರದಲ್ಲಿ 250-300 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನದ ಸ್ಥಿತಿಗತಿಯನ್ನು ಅವಲೋಕಿಸಲಿದೆ. ಕರಾವಳಿ ಮಾತ್ರವಲ್ಲದೆ, ದಕ್ಷಿಣ ಮತ್ತು ಮಧ್ಯ ಕರ್ನಾಟಕ, ಕೇರಳದ ಕೊಯಿಕ್ಕೋಡ್ ವರೆಗಿನ ಹವಾಮಾನ ಮಾಹಿತಿ ಇದರಿಂದ ಲಭ್ಯವಾಗಲಿದ್ದು, ಅರಬ್ಬಿ ಸಮುದ್ರದ ಸ್ವಲ್ಪ ಭಾಗದ ಮಾಹಿತಿಯೂ ಸಿಗಲಿದೆ.
ರಾಡಾರ್ ರೇಡಿಯೋ ಫ್ರೀಕ್ವೆನ್ಸಿ ತಂತ್ರಜ್ಞಾನದ ಮೂಲಕ ಕಾರ್ಯು ನಿರ್ವಹಿಸುತ್ತದೆ. ರಾಡಾರ್ ಕಳುಹಿಸುವ ತರಂಗಗಳು ಮೋಡದ ಒಳಗಿರುವ ಮಂಜುಗಡ್ಡೆಗೆ ಬಡಿದು ರಾಡಾರ್ಗೆ ವಾಪಾಸಾಗುತ್ತವೆ. ಸಿಗ್ನಲ್ ಹೋಗಿ ವಾಪಾಸಾಗುವ ಸಮಯ, ದೂರ, ಎತ್ತರ, ವಿಸ್ತಾರ ಮೊದಲಾದವನ್ನು ಕಲೆ ಹಾಕಿ ಯಾವ ಪ್ರದೇಶದಲ್ಲಿ ಯಾವ ದಿಕ್ಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನಿಖರವಾಗಿ ನೀಡಲಿದೆ.
ಮೂರು ಗಂಟೆಗೊಮ್ಮೆ ಮುನ್ಸೂಚನೆ
ಎಲ್ಲಿ ಮೋಡಗಳು ದಟ್ಟವಾಗುತ್ತವೆ, ಗಾತ್ರ ಹಿರಿದಾಗುವುದು, ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ, ಮೋಡದ ಒಳಗೆ ಮಂಜುಗಡ್ಡೆಗಳು ಉಂಟಾಗಿದೆಯೇ, ಆಲಿಕಲ್ಲು ಮಳೆಯ ಪೂರ್ವ ಮಾಹಿತಿ, ಎಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಇತ್ಯಾದಿ ಮಾಹಿತಿ ರಾಡಾರ್ ನೀಡಲಿದೆ. ಅದನ್ನು ಆಧರಿಸಿ ಕೃಷಿಕರಿಗೆ, ಜನ ಸಾಮಾನ್ಯರಿಗೆ ಮುನ್ನೆಚ್ಚರಿಕೆ, ವಿಪತ್ತು ಮುನ್ಸೂಚನೆಗಳನ್ನು ಪ್ರತಿ ಮೂರು ಗಂಟೆಗೊಮ್ಮೆ ನೀಡಲಾಗುತ್ತದೆ. ಮುಂಗಾರು ಅವಧಿಯಲ್ಲಿ 2-3 ದಿನ ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶಗಳಲ್ಲಿ ನೆರೆ, ಪ್ರವಾಹಗಳು ಉಂಟಾಗುತ್ತವೆ. ಘಟ್ಟದ ಪ್ರದೇಶಲ್ಲಿ ಭಾರಿ ಮಳೆಯಿಂದ ದಿಢೀರ್ ನೆರೆ ನಿರ್ಮಾಣವಾಗುತ್ತದೆ. ಇವುಗಳ ಕುರಿತು ಮುನ್ನೆಚ್ಚರಿಕೆಯನ್ನು ರಾಡಾರ್ ನೀಡಲಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಬದಲಾವಣೆಗಳೂ ರಾಡಾರ್ನ ಸ್ಕ್ಯಾನಿಂಗ್ ನಲ್ಲಿ ಗೋಚರವಾಗುತ್ತದೆ. ಇದರಿಂದ ಮೀನುಗಾರರಿಗೆ ಮುನ್ನೆಚ್ಚರಿಕೆಗಳನ್ನು ನೀಡಲೂ ಸಹಾಯವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.
ವಿಮಾನಯಾನ ಸೇವೆಗೂ ಸಹಕಾರಿ
ರಾಡಾರ್ನ ಸಹಾಯದಿಂದ ಮೇಲ್ಪಟ್ಟದ ಗಾಳಿ, ಮೇಲಕ್ಕೆ ಹೋದಂತೆ ವಿವಿಧ ಹಂತಗಳಲ್ಲಿ ಗಾಳಿಯ ಚಲನೆ ಯಾವ ರೀತಿ ಇದೆ ಎನ್ನುವುದನ್ನು ತಿಳಿಯಬಹುದು. ಆಕಾಶದಲ್ಲಿ ವಿಮಾನಗಳ ಸುಗಮ ಸಂಚಾರಕ್ಕೆ ಇದು ಅಗತ್ಯವಿದ್ದು, ಮಂಗಳೂರು ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ, ಕಣ್ಣೂರು ಸೇರಿದಂತೆ ಸುತ್ತಲಿನ ವಿಮಾನಯಾನ ಸೇವೆಗಳಿಗೆ ರಾಡಾರ್ನಿಂದ ಪ್ರಯೋಜನವಾಗಲಿದೆ.
ಪಶ್ಚಿಮ ಕರಾವಳಿಯಲ್ಲಿ 5ನೇ ರಾಡಾರ್
ಪಶ್ವಿಮ ಕರಾವಳಿಯಲ್ಲಿ ತಿರುವನಂತಪುರ,ಕೊಚ್ಚಿ, ಗೋವಾ ಮತ್ತು ಮುಂಬಯಿನಲ್ಲಿ ಈಗಾಗಲೇ ರಾಡಾರ್ಗಳು ಕಾರ್ಯನಿರ್ವಹಿಸು ತ್ತಿವೆ. ಇದೀಗ ಮಂಗಳೂರಿಗೂ ರಾಡಾರ್ ಲಭಿಸಿದೆ. ಬೆಂಗಳೂರಿನಲ್ಲೂ ಇದೇ ಮಾದರಿಯ ಹೊಸ ರಾಡಾರ್ ಅಳವಡಿಸಲು ಜಾಗವನ್ನು ಅಂತಿಮ ಪಡಿಸುವ ಕೆಲಸ ಪ್ರಗತಿಯಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡದಲ್ಲಿ 100 ಕಿ.ಮೀ. ವ್ಯಾಪ್ತಿ ಹೊಂದಿರುವ ಎಕ್ಸ್ ಬ್ಯಾಂಡ್ ರಾಡಾರ್ ಅಳವಡಿಕೆಯಾಗಲಿದೆ.
ಹವಾಮಾನ ಮಾಹಿತಿ ಸಂಗ್ರಹ ವಿಧಗಳು
ಹವಾಮಾನ ಮುನ್ಸೂಚನೆಗಳಿಗಾಗಿ ಹವಾ ಮಾನ ಇಲಾಖೆ ನ್ಯೂಮರಿಕಲ್ ವೆದರ್ ಪ್ರಿಡಿಕ್ಷನ್ (ಎನ್ಡಬ್ಲ್ಯೂ ಪಿ) ಮಾದರಿ, ಉಪಗ್ರಹ ಆಧಾರಿತ ಮಾಹಿತಿ ಮತ್ತು ರಾಡಾರ್ ಮಾಹಿತಿಯನ್ನು ಅವಲಂಬಿಸುತ್ತದೆ. ರಾಡಾರ್ ತಳಮಟ್ಟದ ನಿಖರ ಮಾಹಿತಿಯನ್ನು ನೀಡುತ್ತದೆ. ಉಪಗ್ರಹಗಳು ಮೇಲ್ಪಟ್ಟದ ಚಿತ್ರ ಮಾಹಿತಿಯನ್ನು ಒದಗಿಸುತ್ತದೆ. ಎನ್ಡಬ್ಲ್ಯೂ ಪಿ ಮೋಡದ ಚಲನೆಯ ದಿಕ್ಕು, ಅಭಿವೃದ್ಧಿ ಕುರಿತಾದ ಮಾರ್ಗದರ್ಶನ ನೀಡುತ್ತದೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.
ಶಕ್ತಿನಗರ ಐಎಂಡಿ ಕೇಂದ್ರದಲ್ಲಿ ರಾಡಾರ್ ಅಳವಡಿಕೆ ಪೂರ್ಣಗೊಂಡಿದ್ದು, ಉಪಕರಣದ ತಪಾಸಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೈದರಾಬಾದ್ನ ಆಸ್ಟ್ರಾ ಎಎಂಪಿಎಲ್ ಸಂಸ್ಥೆ ರಾಡಾರ್ ಅಳವಡಿಸುತ್ತಿದೆ. ರಾಡಾರ್ ಸಂಗ್ರಹಿಸುವ ಮಾಹಿತಿಯನ್ನು ಹವಾಮಾನ ಇಲಾಖೆಯ ಹೊಸ ದಿಲ್ಲಿ ಕೇಂದ್ರಕ್ಕೆ ರವಾನೆಯಾಗುತ್ತದೆ. ಅಲ್ಲಿಂದ ಬೆಂಗಳೂರು ಹವಾಮಾನ ಇಲಾಖೆ ಮುಖಾಂತರ ಸಾರ್ವಜನಿಕರಿಗೆ ಲಭ್ಯವಾಗಲಿದೆ.














