
ಸುಬ್ರಹ್ಮಣ್ಯ: ಮಣ್ಣಿನ ಗೋಡೆಯ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಮೂವರಲ್ಲಿ ಇಬ್ಬರು ಗಾಯಗೊಂಡ, ಓರ್ವರು ಅಪಾಯದಿಂದ ಪಾರಾದ ಘಟನೆ ಮಂಗಳವಾರ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿ ಸಂಭವಿಸಿದೆ.
ನೆಟ್ಟಣದ ಕೃಷ್ಣ ಕುಟ್ಟಿ (65) ಹಾಗೂ ಅವರ ಮಗಳು ಶಾಂತಿ ಕೃಷ್ಣ (35) ಗಾಯಗೊಂಡಿದ್ದು, ಕೃಷ್ಣ ಕುಟ್ಟಿ ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.
ಕೃಷ್ಣ ಕುಟ್ಟಿ ಅವರ ಮನೆಯವರು ಮಂಗಳವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರ ಪತ್ನಿ ಮನೆಯ ಹೊಗಡೆ ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಇಬ್ಬರು ಕಡಬದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆಮಂದಿಗೆ ವಾಸಕ್ಕೆ ಮನೆ ಇಲ್ಲದಂತಾಗಿದ್ದು, ಬದಲಿ ವ್ಯವಸ್ಥೆ ಆಗಬೇಕಾಗಿದೆ. ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯರು, ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಮಂದಿಗೆ ವಾಸಕ್ಕೆ ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಪಂಚಾಯತ್ನವರು ತಿಳಿಸಿದ್ದಾರೆ.














