
ಉತ್ತರಪ್ರದೇಶ: ಇತ್ತೀಚಿಗೆ ಮೀರತ್ ನಲ್ಲಿ ನಡೆದ ಸೌರಭ್ ಗುಪ್ತಾ ಕೊಲೆ ಪ್ರಕರಣವನ್ನೇ ಹೋಲುವಂತ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಉತ್ತರಪ್ರದೇಶದ ಔರಿಯಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಮದುವೆಯಾದ ಎರಡೇ ವಾರಕ್ಕೆ ಪತ್ನಿಯೊಬ್ಬಳು ಸುಪಾರಿ ನೀಡಿ ಪತಿಯನ್ನು ಹ*ತ್ಯೆಗೈದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹ*ತ್ಯೆಯಾದ ವ್ಯಕ್ತಿಯನ್ನು ದಿಲೀಪ್ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಪತ್ನಿ ಪ್ರಗತಿ ಯಾದವ್(22) ಹಾಗೂ ಆಕೆಯ ಗೆಳೆಯ ಅನುರಾಗ್ ಯಾದವ್ ಸೇರಿ ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಈ ವಿಚಾರ ಪ್ರಗತಿ ಮನೆಯವರಿಗೆ ಗೊತ್ತಾಗಿದೆ, ಆದರೆ ಮನೆಯವರು ಈ ಸಂಬಂಧವನ್ನು ಒಪ್ಪಲಿಲ್ಲ ಅಲ್ಲದೆ ತರಾತುರಿಯಲ್ಲಿ ಮಾರ್ಚ್ 5 ರಂದು ದಿಲೀಪ್ ಜೊತೆ ಪ್ರಗತಿ ಮದುವೆಯನ್ನು ಬಲವಂತವಾಗಿ ಮಾಡಿಸಿದ್ದಾರೆ.
ಇದಾದ ಕೇವಲ ಎರಡು ವಾರದಲ್ಲಿ ಅಂದರೆ ಮಾರ್ಚ್ 19 ರಂದು ದಿಲೀಪ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ದಿಲೀಪ್ ಗಂಭೀರ ಗಾಯಗೊಂಡಿದ್ದ ಆತನನ್ನು ಕೂಡಲೇ ಬಿದುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಕೂಡ ಅರೋಗ್ಯ ಹದಗೆಟ್ಟ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಮಧ್ಯಪ್ರದೇಶದ ಗ್ವಾಲಿಯರ್ಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 21 ರಂದು ದಿಲೀಪ್ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿ ದಿಲೀಪ್ ಸಹೋದರ ಸಹರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ ಅಲ್ಲದೆ ಘಟನೆ ನಡೆದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುಪಾರಿ ಹಂತಕ ರಾಮಾಜಿ ಚೌಧರಿ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬಂಧಿತ ಆರೋಪಿ ರಾಮಾಜಿಯನ್ನು ವಿಚಾರಣೆ ನಡೆಸಿದ ವೇಳೆ ದಿಲೀಪ್ ಪತ್ನಿ ಪ್ರಗತಿ ಸುಪಾರಿ ನೀಡಿರುವ ಅಂಶ ಬೆಳಕಿಗೆ ಬಂದಿದ್ದು ದಿಲೀಪ್ ಹತ್ಯೆಗೆ ಎರಡು ಲಕ್ಷ ಸುಪಾರಿ ನೀಡಿರುವ ವಿಚಾರವನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ ಅದರಂತೆ ನಮ್ಮ ತಂಡ ಪ್ಲಾನ್ ಮಾಡಿ ದಿಲೀಪ್ ನನ್ನ ಬೈಕ್ ನಲ್ಲಿ ಕರೆದುಕೊಂಡು ಬಂದು ಹೊಲದ ಬಳಿ ಗುಂಡು ಹರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇನ್ನು ಪ್ರಗತಿ ಮತ್ತು ಅನುರಾಗ್ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಈ ನಡುವೆ ಪ್ರಗತಿ ಮನೆಯವರು ಬಲವಂತವಾಗಿ ಬೇರೊಬ್ಬ ಯುವಕನ ಜೊತೆ ಮದುವೆ ಮಾಡಿದ್ದರಿಂದ ಅನುರಾಗ್ ನನ್ನು ಭೇಟಿಯಾಗಲು ಕಷ್ಟವಾಗುತ್ತಿತ್ತು ಇದರಿಂದ ಹೇಗಾದರೂ ಮಾಡಿ ಆತನನ್ನು ಕೊಲೆ ಮಾಡಬೇಕು ಎಂದು ಗೆಳೆಯನ ಜೊತೆ ಪ್ಲಾನ್ ಮಾಡಿ ದಿಲೀಪ್ ಹತ್ಯೆಗೆ ಸಂಚು ರೂಪಿಸಿ ಸುಪಾರಿ ಹಂತಕರನ್ನು ಬಳಸಲಾಯಿತು ಎಂದು ಪ್ರಗತಿ ಒಪ್ಪಿಕೊಂಡಿದ್ದಾಳೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಪ್ರಗತಿ, ಪ್ರಿಯಕರ ಅನುರಾಗ್ ಸೇರಿದಂತೆ ಸುಪಾರಿ ಹಂತಕರನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಿ ಈ ಘಟನೆ ಹಿಂದೆ ಬೇರೆ ಯಾರು ಇದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.













