ಎಸ್ಇಝೆಡ್ ಅಧಿಕಾರಿಗಳು ದೈವಾರಾಧನೆಗೆ ಅಡ್ಡಿಪಡಿಸಬೇಡಿ: ಶರಣ್ ಪಂಪ್ವೆಲ್-ಕಹಳೆ ನ್ಯೂಸ್

ಮಂಗಳೂರು: ಬಜಪೆ ಸಮೀಪದ ನೆಲ್ಲಿದಡಿಗುತ್ತಿನ ಜುಮಾದಿ ಬಂಟ ದೈವಸ್ಥಾನದಲ್ಲಿ ದೈವಾರಾಧನೆಗೆ ಎಸ್ಇಝೆಡ್ ಅಧಿಕಾರಿಗಳು ಅಡ್ಡಿಪಡಿಸುವುದನ್ನು ಕೈ ಬಿಡದಿದ್ದರೆ ಸಂಘರ್ಷಮಯ ಸ್ಥಿತಿ ಉಂಟಾದೀತು. ಹಾಗಾಗಿ ಕೇಂದ್ರ, ರಾಜ್ಯ ಸರಕಾರ ಹಾಗೂ ಎಸ್ಇಝೆಡ್ ದೈವಾರಾಧನೆಗೆ ಅವಕಾಶ ನೀಡಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ನಗರದ ವಿಶ್ವಶ್ರೀ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲಿದಡಿಗುತ್ತಿನ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಅಲ್ಲಿನ ತೀರ್ಥಬಾವಿಯ ನೀರು ದೈವಿಕ ನಂಬಿಕೆಯಂತೆ ಔಷಧವಾಗಿ ಬಳಸಲಾಗುತ್ತಿದೆ. ದೈವಸ್ಥಾನ ಇರುವ ಭೂಮಿಯನ್ನು ಎಸ್ಇಝೆಡ್ಗೆ ನೀಡಲು ಅಲ್ಲಿನ ದೈವಾರಾಧಕರು ಒಪ್ಪಿಗೆ ನೀಡಿರಲಿಲ್ಲ. ಪರಿಹಾರದ ಹಣವನ್ನೂ ಪಡೆದಿರಲಿಲ್ಲ. ಇಲ್ಲಿ ಭಕ್ತರಿಗೆ ದೈವಾರಾಧನೆಗೆ ಮುಕ್ತ ಅವಕಾಶ ನೀಡುವವರೆಗೆ ವಿಹಿಂಪ ಹೋರಾಟ ನಡೆಸಲಿದೆ ಎಂದರು. ನೆಲ್ಲಿದಡಿಗುತ್ತು ಸಂರಕ್ಷಣ ವೇದಿಕೆ ವತಿಯಿಂದ ಮಾ.18ರಂದು ಬಜಪೆಯಿಂದ ದೈವಸ್ಥಾನದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ವಿಹಿಂಪ ಸಹಿತ ಹಲವು ಹಿಂದೂ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಹೇಳಿದರು.














