
ಬೆಂಗಳೂರು: ವರದಕ್ಷಿಣೆ ಯಾಗಿ 50 ಲಕ್ಷ ರೂ. ನಗದು ಮತ್ತು ಐಷಾರಾಮಿ ಮರ್ಸಿಡಿಸ್ ಕಾರನ್ನು ನೀಡಲಿಲ್ಲ ಎಂಬ ಕಾರಣಕ್ಕೆ ವರ ಮತ್ತು ಆತನ ಕುಟುಂಬ ಸದಸ್ಯರು ರಾತೋರಾತ್ರಿ ಮದುವೆ ಮನೆಯಿಂದ ಪರಾರಿಯಾಗಿದ್ದಾರೆ.
ವಧುವಿನ ತಂದೆ ಬಸಂತ್ ಕುಮಾರ್ ನೀಡಿರುವ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಜಿಗಣಿ ಮೂಲದ ವರ ಪ್ರೇಮ್ ಚಂದ್ ಪಾವನಿ, ಆತನ ತಂದೆ ಶಿವಕುಮಾರ್ ಪಾವನಿ ಮತ್ತು ತಾಯಿ ರಾಧಾ ಪಾವನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರ ಪುತ್ರಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಫ್ರಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ವೇಳೆ ಈ ಹಿಂದೆ ಮೈಸೂರಿನಲ್ಲಿ ಕೇಂದ್ರಿಯ ವಿದ್ಯಾಲಯದಲ್ಲಿ ಕ್ಲಾಸ್ಮೇಟ್ ಆಗಿದ್ದ ಪ್ರೇಮ್ ಚಂದ್ ಕೂಡ ಫ್ರಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಎರಡೂ ಕುಟುಂಬಗಳು ಮಾತುಕತೆ ಮಾಡಿ ಮದುವೆ ನಿಶ್ಚಯಿಸಿದ್ದರು. ಮಾರ್ಚ್ 3ರಂದು ಗಾಂಧಿನಗರದಲ್ಲಿ ಮದುವೆಗೆ ನಿಗದಿಯಾಗಿತ್ತು.
ಮಾರ್ಚ್ 1ರಂದು ಮೆಹಂದಿ ಶಾಸ್ತ್ರ ನಡೆಯುತ್ತಿದ್ದಾಗ ವರನ ಪೋಷಕರು, 50 ಲಕ್ಷ ರೂ. ವರದಕ್ಷಿಣೆ, 1 ಮರ್ಸಿಡಿಸ್ ಕಾರು ನೀಡಬೇಕು ಎಂದು ಬೇಡಿಕೆ ಇಟ್ಟರು. ಮದುವೆಗೆ 25 ಲಕ್ಷ ರೂ. ವ್ಯಯಿಸಿರುವುದರಿಂದ ಇನ್ನು ಕೊಡಲು ಸಾಧ್ಯವಿಲ್ಲ ಎಂದು ವಧುವಿನ ತಂದೆ ತಿಳಿಸಿದ್ದರು. ಅದರಿಂದ ಕೋಪಗೊಂಡ ವರ ಮತ್ತು ಆತನ ಪೋಷಕರು ಯಾರಿಗೂ ಹೇಳದೆ ತಡರಾತ್ರಿ ಮದುವೆ ಮನೆಯಿಂದ ಪರಾರಿಯಾಗಿದ್ದಾರೆ.
ಈ ನಡುವೆ ಮದುವೆಗೆ ಜವುಳಿ ಖರೀದಿಸಲೆಂದು ಹೋಗಿ ಬೆಂಗಳೂರಿನ ಗೆಸ್ಟ್ಹೌಸ್ನಲ್ಲಿ ಉಳಿದುಕೊಂಡಿದ್ದಾಗ ಪ್ರೇಮ್ಚಂದ್ ವಧುವಿನ ಜತೆ ದೈಹಿಕ ಸಂಬಂದ ಬೆಳೆಸಿದ್ದ ಎಂದು ಯುವತಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.














