
ಹೊಸದಿಲ್ಲಿ: ಕೇದಾರನಾಥ ಮತ್ತು ಹೇಮಕುಂಡ ಸಾಹಿಬ್ ಧರ್ಮಕ್ಷೇತ್ರಗಳಿಗೆ ಸರ್ವಋತು ಸಂಪರ್ಕ ಒದಗಿಸುವುದಕ್ಕಾಗಿ 2 ರೋಪ್ವೇಗಳನ್ನು ನಿರ್ಮಾಣ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉತ್ತರಾಖಂಡದ ಸ್ವರ್ಣಪ್ರಯಾಗದಿಂದ ಕೇದಾರ ನಾಥಕ್ಕೆ 12.9 ಕಿ.ಮೀ. ಹಾಗೂ ಗೋವಿಂದಘಾಟ್ನಿಂದ ಹೇಮಕುಂಡ ಸಾಹಿಬ್ಗ 12.9 ಕಿ.ಮೀ. ರೋಪ್ವೇ ನಿರ್ಮಾಣಕ್ಕೆ 6811 ಕೋಟಿ ರೂ. ವೆಚ್ಚ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಅನುಮೋದನೆ ನೀಡಿದೆ.
ಈ ರೋಪ್ವೇಗಳು ಮುಂದಿನ 6 ವರ್ಷಗಳಲ್ಲಿ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ. ಸ್ವರ್ಣಪ್ರಯಾಗದಿಂದ ಕೇದಾರನಾಥಕ್ಕೆ ನಿರ್ಮಾಣ ಮಾಡಲಾಗುತ್ತಿರುವ ರೋಪ್ವೇಗೆ 4081 ಕೋಟಿ ರೂ. ವೆಚ್ಚ ಮಾಡಲಾ ಗುತ್ತಿದೆ. ಹೇಮಕುಂಡ ಸಾಹಿಬ್ ರೋಪ್ವೇಗೆ 2730 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಖಾಸಗಿ ಸಹಭಾಗಿತ್ವ: ಈ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ. ಇದು ಅತ್ಯಾಧುನಿಕ ಟ್ರೈ ಕೇಬಲ್ ಡಿಟ್ಯಾಚೇಬಲ್ ಗೊಂಡೋಲಾ ತಂತ್ರಜ್ಞಾನವನ್ನು ಆಧರಿಸಿದೆ. ಇದು ಪ್ರತೀ ಗಂಟೆಗೆ ಪ್ರತೀ ದಿಕ್ಕಿಗೆ 1,800 ಪ್ರಯಾಣಿಕರನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ದಿನವೊಂದಕ್ಕೆ 18,000 ಪ್ರಯಾಣಿಕರನ್ನು ಸಾಗಿಸುತ್ತದೆ.
36 ನಿಮಿಷಕ್ಕೆ ಪ್ರಯಾಣದ ಅವಧಿ ಇಳಿಕೆ
ಕೇದಾರನಾಥ ಪ್ರಯಾಣವು ಗೌರಿಕುಂಡದಿಂದ 16 ಕಿ.ಮೀ. ಎತ್ತರದ ಚಾರಣವಾಗಿದ್ದು, ಪ್ರಸ್ತುತ ಕುದುರೆಗಳು ಅಥವಾ ಕಾಲ್ನಡಿಗೆಯಲ್ಲಿ ಇದನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ 9 ಗಂಟೆಗಳ ಕಾಲ ನಡೆಯಬೇಕಾಗುತ್ತದೆ. ಹೆಲಿಕಾಪ್ಟರ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಆದರೆ ರೋಪ್ ವೇ ನಿರ್ಮಾಣವಾದ ಬಳಿಕ ಪ್ರಯಾ ಣದ ಅವಧಿ 36 ನಿಮಿಷಗಳಿಗೆ ಇಳಿಕೆಯಾಗಬಹುದು ಎನ್ನಲಾಗಿದೆ. ಹೇಮಕುಂಡ ಸಾಹಿಬ್ ಸಹ 21 ಕಿ.ಮೀ. ಎತ್ತರದ ಚಾರಣವಾಗಿದ್ದು, ಪ್ರಸ್ತಾವಿತ ರೋಪ್ವೇ ಎಲ್ಲಾ ಋತುಗಳಲ್ಲೂ ಇಲ್ಲಿಗೆ ಪ್ರಯಾಣದ ಅನುಕೂಲವನ್ನು ಒದಗಿಸಲಿದೆ ಎನ್ನಲಾಗಿದೆ. ಕೇದಾರನಾಥ ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಿದ್ದರೆ, ಹೇಮಕುಂಡ ಸಾಹಿಬ್ ಸಿಕ್ಖರ ಪವಿತ್ರ ತಾಣವಾಗಿದೆ.














