
ಉಡುಪಿ: ಜಿಲ್ಲೆಯಲ್ಲಿ ದೀಪಾವಳಿಯ ಸಂಭ್ರಮ ಜೋರಾಗಿದೆ. ಉಡುಪಿಯ ಶ್ರೀಕೃಷ್ಣ ಮಠದಲ್ಲೂ ಕೂಡ ಸ್ವಾಮೀಜಿಗಳು ಸಾಂಪ್ರದಾಯಿಕವಾಗಿ ಎಣ್ಣೆಹಚ್ಚಿಕೊಂಡು ನರಕಚತುರ್ಧಶಿಯನ್ನು ಆಚರಿಸಿದರು.
ಈ ದಿನ ಸ್ವಾಮೀಜಿಗಳು ಭಕ್ತರ ಜೊತೆಗೆ ತೈಲಾಭ್ಯಂಜನ ಕೈಗೊಳ್ಳೋದು ವಿಶೇಷ. ಹಾಗಾಗಿ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳಾದ ವಿದ್ಯಾದೀಶತೀರ್ಥ ಸ್ವಾಮೀಜಿ, ಕೃಷ್ಣಾಪುರಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿಗಳು ಅಭ್ಯಂಜನಕ್ಕೆ ಎಣ್ಣೆನೀಡೋದರ ಜೊತೆಗೆ ಪರಸ್ಪರ ಎಣ್ಣೆ ವಿನಿಮಯ ಮಾಡಿಕೊಂಡು ಬಂದ ಭಕ್ತರಿಗೂ ಎಣ್ಣೆಯನ್ನು ನೀಡಿ ಆಶೀರ್ವದಿಸಿದರು.
ಈ ವೇಳೆ ಕೃಷ್ಣಮಠದೊಳಗೆ ಸಾಲುಸಾಲಾಗಿ ದೀಪಗಳನ್ನು ಭಕ್ತರು ಬೆಳಗಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದರು.














