
ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ, ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ, ಸುಮಾರು 23 ಗೋಣಿ ಸುಲಿಯದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರ್ಯಾಚರಣೆ ನಡೆಸಿದ ಪೆÇಲೀಸರು ನಾಲ್ಕು ಮಂದಿ ಅರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ 1,55,925/- ರೂಪಾಯಿ ಮೌಲ್ಯದ ಅಡಿಕೆ ಸಹಿತ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಡಗನ್ನೂರು ನಿವಾಸಿಗಳಾದ ಶ್ರವಣ್ ಕೆ (20), ಜಯಚಂದ್ರ (21), ನಿಡ್ಪಳ್ಳಿ ನಿವಾಸಿಗಳಾದ ಅಶೋಕ (24), ಪುನೀತ್ (20) ಎಂದು ಗುರುತಿಸಲಾಗಿದೆ. ಬಂಧಿತರದಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 4,15,925/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಬಡಗನ್ನೂರು ಗ್ರಾಮದ ಕೊಯ್ದ ಎಂಬಲ್ಲಿರುವ ನವೀನ್ ಕುಮಾರ್ ರೈ ಎಂಬವರಿಗೆ ಸೇರಿದ ಹಳೇ ಮನೆಯ ಕೊಟ್ಟಿಗೆಯ ಅಟ್ಟದಲ್ಲಿ ಎನ್ ಕೆ ಆರ್ ಎಂದು ಮಾರ್ಕ್ ಮಾಡಿ ಇಟ್ಟಿದ್ದ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಲಾಗಿದ್ದು, ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಬೇಧಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯತ್ ಮತ್ತು ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಮ್ ಎನ್ ಅವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕಿ ಡಾ.ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ.ಬಿ.ಎಸ್, ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಧನಂಜಯ್ ಬಿ.ಸಿ ರವರ ನೇತೃತ್ವದಲ್ಲಿ ಎಎಸ್ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಹರೀಶ್ ಗೌಡ, ದಯಾನಂದ, ಸುಂದರ್, ವೆಂಕಪ್ಪ, ಸಲೀಂ, ನಾಗೇಶ್ ಕೆ ಸಿ, ಮುನಿಯ ನಾಯ್ಕ ಕಾರ್ತಿಕ್, ಯುವರಾಜ ನಾಯ್ಕ, ಚಾಲಕ ಯೋಗೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.















