
ಮಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಡೆಂಗ್ಯೂ ರೋಗಿಗಳಿಗೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮಂಗಳೂರು ಶಾಖೆಯ ವತಿಯಿಂದ ಉಚಿತ ಪ್ಲೇಟ್ಲೆಟ್ ಬ್ಲಡ್ ವಿತರಿಸಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿಲ್ಲದ ರೋಗಿಗಳಿಗೆ 200 ರೂ. ದರದಲ್ಲಿ ಪ್ಲೇಟ್ಲೆಟ್ಗಳನ್ನು ವಿತರಿಸಲಾಗುವುದು ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಶಾಖೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶರ್ಮ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ನಿವಾರಣೆಗಾಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಜೊತೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೂಡ ಕೈಜೋಡಿಸಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ನಮ್ಮ ಶಾಖೆಯ ವತಿಯಿಂದ ಗುಜ್ಜರಕೆರೆ ಮತ್ತು ಬೋಳಾರ ಪರಿಸರದಲ್ಲಿ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ರೆಡ್ಕ್ರಾಸ್ ಯುವ ಸ್ವಯಂಸೇವಕರು ನಗರದ ಗುಜ್ಜರಕೆರೆ, ಜೆಪ್ಪು, ಬೋಳಾರ, ನಂತೂರು, ರೊಸಾರಿಯೋ ಪ್ರೌಢಶಾಲೆ, ಪಾಂಡೇಶ್ವರ, ಬಂದರು, ಫಳ್ನೀರು, ಬಲ್ಲಾಳ್ಬಾಗ್, ಬಿಜೈ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಮ್ಮಿಕೊಂಡ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲೂ ರೆಡ್ಕ್ರಾಸ್ ಪಾಲ್ಗೊಳ್ಳಲಿದೆ. ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ನಿಂದ ಉಚಿತ ರಕ್ತ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ. ಶಾಖೆಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಮ್ಯಾನೇಜಿಂಗ್ ಕಮಿಟಿ ಕೋಶಾಧಿಕಾರಿ ಆರ್ಚಿಬಾಲ್ಡ್ ಮಿನೇಜಸ್, ಸಬ್ಕಮಿಟಿ ಚೇರ್ಮೆನ್ ಡಾ.ಯು.ವಿ. ಶೆಣೈ, ಬ್ಲಡ್ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ರಚನಾ ಉಪಸ್ಥಿತರಿದ್ದರು.











